Thursday, 29 January 2015

ಸಾಯೋಕಾಲದಲ್ಲಿ ಆಗುವವನೇ ಬಾಂಧವ ಅಲ್ಲ ನರ್ಸ್...


                            ಆಶ್ಚರ್ಯವಾಗಬಹುದು  ನಿಮಗೆ ...ಏನು  ಹೀಗೆ ಬರೆದಿದ್ದಾರಲ್ಲ ಎಂದು ಅನಿಸುತ್ತಿರಬಹುದು, ಹಳೇ ಗಾದೆಯನ್ನು ಹೆಚ್ಚಾಗಿ ಬಳಸುತ್ತಿದ್ದುದು  ಮಧ್ಯ ಮತ್ತು ಮುಪ್ಪಿನ ವಯಸ್ಸಿನವರು. ಅವರಿಗೆ ಅದೇ ಚಿಂತೆ. ಸಾಯುವಾಗ ಜೊತೆಗೆ ಯಾರು ಇರುತ್ತಾರೋ , ಹೆಂಡತಿಯೋ ! ಮಕ್ಕಳೋ! ಮೊಮ್ಮಕ್ಕಳೋ! ಮರಿ ಮಕ್ಕಳೋ! ನೆರೆ ಹೊರೆಯವರೋ!  ಇತ್ಯಾದಿ..  ಇದರ ನಂತರ ಹೆಚ್ಚು ಜನರು ಯೋಚಿಸುವುದು ಕಡಿಮೆ. ಇದೆಲ್ಲಾ  ಹಳ್ಳಿಯ ಅಥವಾ ಗ್ರಾಮೀಣ ಜನರು  ಯೋಚಿಸುವ ರೀತಿ ಎಂದು ತಿಳಿಯಬೇಡಿ. ಅಥವಾ ಹಳೆಯ ಮಾತು ಎಂದು ಭಾವಿಸಬೇಡಿ.
                     ಈಗ ಪರಿಸ್ಥಿತಿ ಹಾಗೂ ಸಮಾಜದಲ್ಲಿ ಬದಲಾವಣೆ  ಅನಿವಾರ್ಯವಾಗಿದೆ. ಮನೆಯವರ ಒತ್ತಡ ಇಲ್ಲವೇ ವಿಮಾ ಪ್ರಭಾವದ ಕಾರಣದಿಂದ ಸಾಯೋ ಸಮಯ ಅಥವಾ ಕಾಯಿಲೆ ತೀವ್ರವಾದಾಗ ಆಸ್ಪತ್ರೆ ಸೇರುವುದು ಸಾಮಾನ್ಯವಾಗಿದೆ. ಇಲ್ಲವೇ ಮನೆಯಲ್ಲಿಯೇ ನರ್ಸ್ ರವರ ಸೇವೆ ಪಡೆಯುವ ಕಾಲ ಬಂದಿದೆ. ಆಸ್ಪತ್ರೆಯಲ್ಲಿಯೂ ಕೂಡ  ಸಾಯುವವರನ್ನು ಸಂಬಂಧಿಕರು ನೋಡುವ ಹಾಗಿಲ್ಲ ಏಕೆಂದರೆ ಅವರನ್ನು ಐ ಸಿ ಯು (ICU)  ಘಟಕದಲ್ಲಿ ಪರದೆಗಳ ಮಧ್ಯದಲ್ಲಿ, ಕೊಳವೆಗಳ ಮತ್ತು ಮಷಿನ್ನಗಳನ್ನು ಆವರಿಸಿಕೊಂಡು ಬಿದ್ದಿರುತ್ತಾರೆ. ಆಗಾಗ  ನೋಡುವುದೇ ನರ್ಸ್ ಮಾತ್ರ  ಮತ್ತು ಅವಳೇ ಸುದ್ದಿ   ಅಲ್ಲ,  ತಪ್ಪು ಮರಣ ವಾರ್ತೆ ಡಾಕ್ಟರಿಗೆ ಮುಟ್ಟಿಸುವುದು. ನಂತರ  ಇತರರಿಗೆ ತಿಳಿಸುವುದು. ಕೆಲವೂಮ್ಮೆ ವ್ಯಕ್ತಿ ಸಾಯುವಾಗ ನರ್ಸ್ ಅವನ ಕೈಯನ್ನು ಹಿಡಿದಿರುತ್ತಾಳೆ. ಆದ ಕಾರಣ ಸಾಯೋಕಾಲದಲ್ಲಿ  ನೆರವಾಗುವವರೇ ನರ್ಸ್ ಗಳು, ಬಾಂಧವರಲ್ಲ. ಇದೇ ಪರಿಸ್ಥಿತಿ ಹಳ್ಳಿಯ ಆಸ್ಪತ್ರೆಗಳಲ್ಲೂ  ಉಂಟಾಗಿದೆ.
                 ನಿಮ್ಮಲ್ಲಿ  ಕೆಲವರಿಗೆ ಏನಾದರೂ ಆಸೆಯಿದ್ದು ನರ್ಸ್ ನ್ನು ನೋಡಿಕೊಂಡು  ಸಾಯಬೇಕೆನಿಸಿದರೆ ಈಗಲೇ ನಿಮ್ಮ ಹುಡುಕಾಟ ಶುರುಮಾಡಿಕೊಳ್ಳಿ  , ಸಾಧ್ಯವಾದರೆ ಕೊನೆಯ ಆಸೆಯೆಂದು ಚೀಟಿಯಲ್ಲಿ ಬರೆದಿಟ್ಟುಕೊಂಡಿರಿ  ..ಏಕೆಂದರೆ ಸಾಯುವಾಗಲಾದರೂ ನಿಮ್ಮ ಆಸೆ ಪೂರೈಸಬೇಡವೇ???  




Monday, 24 November 2014

ಮುದುಕರಾದರೂ ಮೀಸೆ ಹಣ್ಣಾಗುವುದಿಲ್ಲ....

            ಒಂದು ಗಾದೆ ಮಾತಿನಂತೆ " ಜಟ್ಟಿ ಕೆಳಗೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ " ಎಂದು. ಇದು ಕುಸ್ತಿ ಮಾಡುವ ಜಟ್ಟಿಯ ಚಾಕ್ಯತೆ, ಚಾಣಾಕ್ಷತನವನ್ನು ತೋರಿಸುತ್ತಿತ್ತು. ಕಾಲ ಬದಲಾಗಿದೆ ಜಟ್ಟಿಯು ಮೀಸೆ ಬಿಡುವುದಿಲ್ಲ ಬದಲಿಗೆ ಮೀಸೆಯನ್ನು ನುಣ್ಣಗೆ ಕ್ಷೌರ ಮಾಡಿಸುತ್ತಾನೆ ಮತ್ತು ಮಣ್ಣಿನ ವಾಸನೆಯೇ ಕುಸ್ತಿಯಲ್ಲಿಲ್ಲ. ಈಗ ಹಲಗೆಗಳ ರಂಗ ಮಂಚ ಅಥವಾ ಬಟ್ಟೆಯ ಮಂಚದ ಜಾಗ. ಇನ್ನೂ ಕೆಲವು ವರ್ಷಗಳಲ್ಲಿ ಈ ಗಾದೆಯ ಮಾತು ಉಪಯೋಗಕ್ಕೆ ಬರುವುದಿಲ್ಲ ಎನ್ನೋಣ.

               ಆದರೆ ಮತ್ತೊಂದು ರೀತಿಯಲ್ಲಿ ಈ ಗಾದೆಗೆ ಸೇರಿಸಿಕೊಳ್ಳಬಹುದು. ಅದೇನೆಂದರೆ " ಮುದುಕರಾದರೂ  ಮೀಸೆ ಹಣ್ಣಾಗುವುದಿಲ್ಲ..." ಎಂದು. ಕಾರಣವೇನೆಂದರೆ ಸುಲಭವಾಗಿ ಎಲ್ಲಾ ಅಂಗಡಿಗಳಲ್ಲೂ ಕಡಿಮೆ ದರದಲ್ಲಿ ಎಲ್ಲರಿಗೂ ದೊರೆಯುವ ಕೂದಲಿಗೆ ಹಚ್ಚುವ ಬಣ್ಣಗಳು ಮತ್ತು ಸುದೀರ್ಘವಾಗುತ್ತಿರುವ ಆಯಸ್ಸು. ಇವೆರಡಕ್ಕೂ ರಸಿಕತೆ ಸ್ವಲ್ಪ ಇರಲೇಬೇಕು ಎನ್ನಿ. ತಲೆಯಲ್ಲಿ  ಶೇಕಡ ಎಂಬತ್ತರಷ್ಟು ಕೂದಲುಗಳು ಮಾಯವಾಗಿ ಬಟ್ಟ ಬಯಲಾದ ಮುದುಕರಲ್ಲೂ ಕೂಡ ಮೂಗಿನ ಕೆಳಗೆ ದಪ್ಪಗೆ ಮೀಸೆಯಂತೂ ರಾರಾಜಿಸುತ್ತದೆ. ಈ  ಮೀಸೆಯನ್ನು ಆರೈಕೆ ಮಾಡಿಕೊಳ್ಳುವ ಅವಶ್ಯಕತೆಯಿಲ್ಲ ಆದರೆ ಅಂದವಾಗಿ ಕಾಣಲು ರಸಿಕತೆ ಬೇಕೇಬೇಕು.

             ಹಲವು ಯುವಕ ಮುದುಕರೂ ಹಾಗೂ ಹಣ್ಣಾದ ಮುದುಕರೂ ಕೂಡ ಮೀಸೆಯು ಬೆಳ್ಳಗೆ ಕಾಣಲು ಇಷ್ಟ ಪಡುವುದಿಲ್ಲ. ಈ ಕಾರಣದಿಂದ ಮೀಸೆಗೆ ಬಣ್ಣ ಹಚ್ಚುವುದರಿಂದ ಈ ಮುದುಕರಿಗೆ ಮೀಸೆ ಹಣ್ಣಾಗುವುದಿಲ್ಲ.... ಎಂಬ ನಂಬಿಕೆ.  ನಿಮಗೂ ಹೀಗೆ ಅನಿಸುತ್ತಿದೆಯಾ?


ಅವನೊಬ್ಬ ಮುಂಡೆಗಂಡ.........


                         ಮೊದಲು ಹಿರಿಯರು ಉಪಯೋಗಿಸುತ್ತಿದ್ದ ಶಬ್ಧಗಳೆಂದರೆ ಅಥವಾ ಬೈಗುಳವೆಂದರೆ " ಮುಂಡೆಗಂಡ", " ಮುಂಡೆಮಗನೆ" ಎಂಬುದು ಸಾಮಾನ್ಯವಾದವುಗಳು. ಈ ಬೈಗುಳಗಳನ್ನು ವಿದ್ಯಾವಂತರು, ಕಲಿತವರು, ಮರ್ಯಾದೆಯಿಂದ ಮಹಿಳೆಯರು ಹೆಚ್ಚಾಗಿ ಬಲಸುತ್ತಿದ್ದರು. ಇನ್ನಿತರರು ಬಳಸುತ್ತಿದ್ದುದು " ಬೋ.....ಮಗನೆ, ಸೂ...ಮಗನೆ...." ಇತ್ಯಾದಿಗಳು.
                          ಈ ಶಬ್ಧಗಳಿಗೆ ಅರ್ಥವಿರುವಿದೇನೋ ನಿಜ. ಆದರೆ ಮೇಲೆ ತಿಳಿಸಿದ ಜನರು ತಿಳುವಳಿಕೆಯುಳ್ಳವರಾದ ಕಾರಣ  ನಿಜವಾಗಿ ಅರ್ಥ ಚೆನ್ನಾಗಿ ತಿಳಿದಿರುತ್ತದೆ. ಮುಂಡೆಗೆ ಗಂಡನಾಗುವುದು ಅನೈತಿಕ ಸಂಬಂಧ ಎಂದಾದರೆ ಈ ಜನರಿಗೆ ಹೇಗೆ ತಿಳಿಯಿತು ಇವನು ಮುಂಡೆಗಂಡ ಎಂದು? ಇದನ್ನು ಜನರು ನೋಡಿರಲೇ ಬೇಕಲ್ಲ! ಹೀಗಾಗಿ ಇದು ಅಸೂಯೆಯ ಮಾತೋ , ಬೈಗುಳದ ಮಾತೋ ಅವರಿಗೇ ಗೊತ್ತು?  ಇನ್ನೊಂದು ವಿಷಯವೆಂದರೆ ಸಮಾಜದ  ದೃಷ್ಟಿಯಲ್ಲಿ ಮುಂಡೆಗೆ  ಗಂಡನಾಗುವ ಈ ಅನೈತಿಕನನ್ನು ಯಾಕೆ ತಡೆಯಲಿಲ್ಲ? ಬೈಯ್ಯುವುದಕ್ಕೆ ಉಪಯೋಗವಾಗುತ್ತದೆ ಎಂದು ಅವನನ್ನು ಹಾಗೇ ಬಿಟ್ಟರೇ?

               ಕಾಲ ಬದಲಾಗಿದೆ ಮತ್ತು  ಈ ಬೈಗುಳ ಶಬ್ಧಗಳು ಮೂಲೆ ಸೇರುತ್ತಿವೆ. ಕಾರಣ ತಿಳಿಯುವುದು ಕಷ್ಟ. ಬಹುಶ ಶಬ್ಢಕ್ಕೆ ಅರ್ಥವಿಲ್ಲವೇನೋ ಅಥವಾ ಸಮಾಜ ಪರಿವರ್ತಿತವಾಯಿತೇನೋ ಅಲ್ಲವೇ? ಉತ್ತರ ಯಾರು ಹೇಳುತ್ತೀರಿ?

Monday, 30 September 2013

ಅಂಗವಿಕಲರೇ!

ಸುಮಾರು ದಿವಸದಿಂದ ಜಯನಗರ ನಾಲ್ಕನೇ ಬ್ಲಾಕ್ ನಲ್ಲಿ ಒಂದು ಬೋರ್ಡ್ ಬರಹ ನನ್ನ ಗಮನಕ್ಕೆ ಬಂದಿತ್ತು. ಅದೇನೆಂದರೆ ಟೆಲಿಪೋನ್ ಬೂತ್ ನ ಬರಹವೇನೆಂದರೆ ಅಂಗವಿಕಲ ಟೆಲಿಪೋನ್ ಬೂತ್ ಎಂದು. ಹತ್ತಿರದಿಂದ ಗಮನಿಸಿದೆ ಯಾರೋ ಒಬ್ಬ ವ್ಯಕ್ತಿ ಕುಳಿತಿದ್ದ ಮತ್ತು ಒಂದು ಪೋನ್ ಕೂಡ ಇತ್ತು. ಬಹುಷಃ ಅವನೇ ಅಂಗವಿಕಲನಿರಬಹುದೆಂದು ತಿಳಿದೆ. ಇದೇನೂ ಅಂತಹ ದೊಡ್ಡ ವಿಷಯ ಅಲ್ಲ. ಕೆಲವು ತಿಂಗಳಿಂದ ಆ ಬೂತ್ ಮುಚ್ಚಿದೆ. ಆ ಬೂತ್ ನ ಮೇಲೆ ಮತ್ತೊಮ್ಮೆ ನೋಡಿದೆ. ಅದೇ ಬರಹ . ಆದರೆ ಏನಾಯಿತೋ ಗೊತ್ತಿಲ್ಲ. ಅಂಗ ವಿಕಲ ಟೆಲಿಪೋನ್ ಬೂತ್ ಮಾತ್ರ ಇದ್ದದ್ದು ಇನ್ನೊಂದು ಸಲ ಓದಿಕೊಂಡೆ. ಈಗ ತಿಳಿಯಿತು, ಇಲ್ಲಿ ಎರಡು ಅಂಗವಿಕಲಗಳಿವೆ ಎಂದು. ಮೊದಲನೆಯದು ಬೂತ್ ನಡೆಸುತ್ತಿದ್ದ ವ್ಯಕ್ತಿ ಅಂಗವಿಕಲನಾದರೆ ಎರಡನೆಯದು ಅಂಗವಿಕಲ ಪೋನ್ ಇರಬಹುದೆಂದು ನನ್ನ ಅನಿಸಿಕೆ. ಈಗ ಎರಡೂ ಕೆಲಸ ಮಾಡುತ್ತಿಲ್ಲವೇನೊ? ಈಗ ಯಾವುದಾದರೂ ಸ್ಕೀಮ್ ಬಂದಿರಬಹುದೇ ಎಂದು? ಅಂಗವಿಕಲರಿಗೆ ಅಂಗವಿಕಲ ಸೆಟ್ ಗಳನ್ನೇ ಕೊಡಬಹುದೆಂಬುದು. ಇದು ನಿಮಗೇನಾದರು ಗೊತ್ತಾ?

Saturday, 27 April 2013

ಕನ್ನಡಿಯಲ್ಲಿ ನಿಮ್ಮ ಮುಖ ನೋಡಿ.....

         ನಾನು ರೈಲಿನಲ್ಲಿ ಪ್ರಯಾಣ ಮಾಡುತ್ತಿರುವಾಗ ಗಮನಿಸಿದ ಹಾಗು ಹಲವು ಸಲ ನೋಡಿ ಮನಸ್ಸಿನೊಳಗೇ ನಗುತ್ತಿದ್ದುದು ಇದೆ. ಅದರಲ್ಲೂ ಹದಗು ಪ್ರಯಾಣದ ರೈಲುಗಳಾದರೆ ಅದರಲ್ಲಿ ಕುಳಿತುಕೊಳ್ಳುವ ವ್ಯವಸ್ಥೆ ಇರುವ ಕಾರಣ ರೈಲಿನಲ್ಲಿ ನಿಮಗೆ ಬಿಟ್ಟಿ ಮನರಂಜನೆ ಸಿಗುವುದು ಎಓದು ನನ್ನೆ ಅನಿಸಿಕೆ.

           ರೈಲಿನ ಕೋಚಿನ ಅಥವಾ ಬೋಗಿ ಎರಡೂ ತುದಿಯಲ್ಲಿ ಟಾಯ್ಲೆಟ್ ಮೊದಲು ಕನ್ನಡಿ ಮತ್ತು ಕೈ ತೊಳೆಯಲು ( ಏನು ಬೇಕಾದರೂ ತೊಳೆಯಬಹುದು) ನೀರಿನ ವ್ಯವಸ್ಥೆ ಮತ್ತು ಸಿಂಕು ಇರುತ್ತದೆ. ಈ ಕನ್ನಡಿಯೇ ನನ್ನೆ ಮನರಂಜನೆಗೆ ಮುಖ್ಯ ವಸ್ತು. ರೈಲು ಹತ್ತುವಾಗ ಹೆಚ್ಚು ಜನ ಕನ್ನಡಿಯ ಬಗ್ಗೆ ಗಮನ ಹರಿಸಲು ಹೋಗುವುದಿಲ್ಲ. ಆದರೆ ಜನರು ಇಳಿಯುವಾಗ ಶೇಕಡ ತೊಂಬತ್ತರಷ್ಟು ಮಂದಿ ಕನ್ನಡಿಯಲ್ಲಿ ತಮ್ಮ ಮುಖ ದರ್ಶನ ಮಾಡಿಯೇ ಕೆಳಗಿಳಿಯುತ್ತಾರೆ, ಅದೂ ಕೆಲವೇ ಕ್ಷಣಗಳು ಮಾತ್ರ. ಆದರೆ ರೈಲು ಚಲಿಸಿತ್ತಿರುವಾಗೆ ಪಡ್ಡೆ ಹುಡುಗರು ಮತ್ತು ಯುವ ಪ್ರಾಯದವರು ತಮ್ಮನ್ನು ಕನ್ನಡಿಯಲ್ಲಿ ನೋಡಿಕೊಳ್ಳುವುದನ್ನು ಗಮನಿಸುತ್ತಿದ್ದರೆ ನೀವು ತುಂಬೆ ಮನಸ್ಸಿನಿಂದ ಮನರಂಜಿಸಿಕೊಳ್ಳಬಹುದು. ನಾನು ಗಮನಿಸಿದ ಹಾಗೆ ಹೆಚ್ಚು ಯುವಕರು ಒಂದೇ ರೀತಿ ಕನ್ನಡಿಯ ಮುಂದೆ ನಡೆದುಕೊಳ್ಳುವುದು. ಮೊದಲಿಗೆ ತಮ್ಮ ತಲೆಕೂದಲನ್ನು ಸರಿ ಮಾಡಿಕೊಳ್ಳುತ್ತಾರೆ. ಕೆಲವರು ಮುಂದಿನ ಕೂದಲನ್ನು ಹಿಂದಕ್ಕೆ ತಳ್ಳಿಕೊಂಡರೆ , ಕೆಲವರು ಕೂದಲನ್ನು ಒತ್ತಿ ಒತ್ತಿ ಅಥವಾ ಕೈ ಬೆರಳಿನಿಂದ ತೀಡಿಕೊಂಡು ಒಂದು ರೂಪಕ್ಕೆ ತರಿಸಿಕೊಳ್ಳುತ್ತಾರೆ.

          ಮುಂದಿನ ಹಂತವೇ ಸ್ವಾರಸ್ಯಕರ . ಮೊದಲಿಗೆ ಮುಖ ಸರಿಯಾಗಿರಿಸಿಕೊಂಡು ನೋಡಿಕೊಳ್ಲುತ್ತಾರೆ ನಂತರ ಕಿರುನಗೆಯನ್ನು ತುಟಿಯಲ್ಲಿ ಮಾಡಿಕೊಳ್ಳುತ್ತಾರೆ. ಹಾಗೆ ಮುಂದುವರಿಸಿಕೊಂಡು ಮಖವನ್ನು ಓರೆಯಾಗಿ ಮಾಡಿಕೊಂಡು ತಾನು ನಕ್ಕರೆ ಹೇಗೆ ಕಾಣುತ್ತಿರುವೆನೆಂದು ನೋಡಿಕೊಳ್ಳುವುದು. ಇದಾದ ತಕ್ಷಣ ಕೆಲವರಲ್ಲಿ ಅನುಮಾನ ಮೂಡಿದ ಹಾಗೆ ಕನ್ನಡಿಯ ಮುಂದಕ್ಕೆ ವಾಲಿಕೊಂಡು ಹಲ್ಲುಗಳನ್ನು ಪರೀಕ್ಷಿಸಿಕೊಳ್ಳುವುದು. ಎರಡೂ ದಂತಪಂಕ್ತಿಯನ್ನು ನೋಡಿಕೊಂಡು ತುಟಿಯನ್ನು ವಿಚಿತ್ರ ರೀತಿಯಲ್ಲಿ ಮಾಡುವುದನ್ನು ನೀವು ದೂರದಿಂದಲೇ ಗಮನಿಸಿದರೆ ನೀವೂ ಕೂಡ ಮನಸ್ಸಿನಲ್ಲಿ ನಗದೇ ಇರಲಾರಿರಿ. ಮುಂದಿನ ಹಂತವೇ ಕಣ್ಣುಗಳನ್ನು ಪರೀಕ್ಷಿಸಿಕೊಳ್ಳುವುದು ಅರ್ಥಾತ್ ನೋಡಿಕೊಳ್ಳುವುದು. ಮೊದಲಿಗೆ ಕಣ್ಣುಗಳನ್ನು ಅಗಲ ಮಾಡಿ , ನಂತರ ಕಿರಿದು ಮಾಡಿ, ವಾರೆಗಣ್ಣು ಮಾಡಿ ನೋಡಿದ ಮೇಲೆಯೇ ಎನೋ ಒಂದು ರೀತಿಯ ತೃಪ್ತಿ ಆ ವ್ಯಕ್ತಿಗೆ.

             ಇಲ್ಲಿ ಗಮನಿಸಬೇಕಾದದ್ದು ಒಂದು ವಿಷಯವೆಂದರೆ ಕನ್ನಡಿಯ ಮುಂದೆ ನಿಂತಾಗ ಅವನು ಯಾವುದೇ ಅಡಚಣೆಯಿಲ್ಲದಿದ್ದಾಗ ಮಾತ್ರ ಈ ಶೃಂಗಾರ. ಹಲವರು ತನ್ನ ಸುತ್ತಮುತ್ತ ಇದ್ದರೂ ಕ್ಯಾರೇ ಎನ್ನುವುದಿಲ್ಲ. ತನ್ನನ್ನು ಯಾರೂ ಗಮನಿಸುತ್ತಿಲ್ಲ ಎಂಬುದು. ಆದರೆ ವಾಸ್ತವವಾಗಿ ನನ್ನಂತಹ ಹಲವೆ ಜನರು ಪೇಪರ್ ಓದಿದ ಮೇಲೆ, ಪತ್ರಿಕೆಗಳನ್ನು ತಿರುವಿಹಾಕಿದ ಮೇಲೆ, ಸುಮ್ಮನೆ ಟೈಂ ಪಾಸ್ ಗೆ ಅಲ್ಲಿ ಇಲ್ಲಿ ನೋಡುತ್ತಿರುವಾಗ ದೂರದಿಂದ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಬಹುದು. ನಾವು ಆ ವ್ಯಕ್ತಿಯ ಹಿಂದೆ ಇರುವ ಕಾರಣ ಅವನ ಮುಖದ ಚಲನವಲನಗಳನ್ನು ದರ್ಶನ ನಮಗೆ ಲಭ್ಯವಾಗಿ ಪುಕ್ಕಟೆ ಮನರಂಜನೆ ಕೊಡುತ್ತದೆ. ಹೆಂಗಸರು ಈ ರೀತಿ ನಡೆದುಕೊಳ್ಳುವುದು ಅಪರೂಪ.

              ಮುಂದಿನ ಸಲ ಕನ್ನಡಿಯಲ್ಲಿ ನಮ್ಮ ಮುಖ ದರ್ಶನದ ಜೊತೆಗೆ ಕನ್ನಡಿಯ ಕಡೆಗೇ ಇನ್ನೂ ಯಾರದಾದರು ಮುಖವಿದೆಯೆ ಎಂದು ಕನ್ನಡಿಯಲ್ಲೇ ಗಮನಿಸಿ. ಇಲ್ಲದಿದ್ದರೆ ನೀವು ಪುಕ್ಕಟೆ ಮನರಂಜನೆಗೆ ಒಂದು ವಸ್ತುವಾಗುವಿರಿ.

Thursday, 3 January 2013

ಮೂಗು ತುದಿಯಲ್ಲೇ ಕೋಪ .. . ...

                  ಇವನಿಗೆ ಯಾವಾಗಲೂ ಮೂಗಿನ ತುದಿಯಲ್ಲೇ ಕೋಪ " ಎಂದು ನನ್ನ ಅಕ್ಕ ಆಗಾಗ ನನ್ನನ್ನು ಚಿಕ್ಕವನಿದ್ದಾಗ ರೇಗಿಸುತ್ತಿದ್ದಳು. ಯಾವಾಗ ಎಂದರೆ ಅದೂ ಕೋಪ ಇಳಿದ ಮೇಲೆ. ಇದನ್ನು ಓದುತ್ತಿರುವವರಿಗೂ ಅನುಭವ ಆಗಿರಬೇಕೆ ಅಥವಾ ಅನುಭವಿಸಿರಬೇಕು ಎಂದು ನನ್ನ ಅನಿಸಿಕೆ.ಆದರೆ ನನ್ನ ಸಂದೇಹ ಎಂದರೆ ಮೂಗು ತುದಿಯಲ್ಲಿ ಕೋಪವಿರುತ್ತೋ ಅಥವಾ ಮೂಗಿನ ಬುಡದಲ್ಲಿ ಕೋಪವಿರುತ್ತೋ ! ಎನ್ನುವುದು. ಮೂಗಿನ ತುದಿಯಲ್ಲಿ ಕೋಪವಿದ್ದರೆ ಮುಂಗೋಪಿ ಎಂದು ಕರೆಯಬಹುದು ಎಂದುಕೊಳ್ಳೋಣ ಅದೇ ಮೂಗಿನ ಬುಡದಲ್ಲಿ ಕೋಪವಿದ್ದರೆ ಹಿಂಗೋಪಿ ಅಥವಾ ಮಧ್ಯಗೋಪಿ ಎಂದು ಎಲ್ಲೂ ಕರೆದಿರುವುದನ್ನು ನಾನು ಓದಿಲ್ಲ ಅಥವಾ ಕೇಳಿಲ್ಲ.

            ಎರಡನೆಯದು ಮೂಗಿನ ತುದಿಯಲ್ಲೇ ಕೋಪ ಎಂದು ಹೇಳುವವರಿಗೆ ನಿಜವಾಗಿಯೂ ಕೋಪ ಕಾಣಿಸುತ್ತದೆಯೇ ! ಏಕೆಂದರೆ ಯಾರಾದರೂ ಆಗಲಿ ಅಣ್ಣ, ಅಕ್ಕ, ತಂಗಿ, ಗಂಡ, ಸ್ನೇಹಿತ ಯಾರ‍ೇ ಆದರೂ ಬೇರೆಯವರ ಕಡೆ ಬೆಟ್ಟು ಮಾಡಿ ಇವನಿಗೆ ಮೂಗಿನ ತುದಿಯಲ್ಲೇ ಕೋಪ ( ಮುಂಗೋಪಿ) ಎಂದು ಹೇಳುತ್ತಾರೆ. ಆದರೆ ಆ ವ್ಯಕ್ತಿಗೆ ನಿಜವಾಗಿಯೂ ಕೋಪ ಮೂಗಿನ ತುದಿಯಲ್ಲಿ ಇರುವುದು ಅನುಭವವಾಗುತ್ತದೆಯೇ ಎನ್ನುವುದು. ಏಕೆಂದರೆ ಯಾರೂ ನನಗೆ ಮೂಗಿನ ತುದಿಯಲ್ಲೇ ಕೋಪವಿದೆ ಎಂದು ಹೇಳಿಕೊಳ್ಳುವುದಿಲ್ಲ.
       
         ಇನ್ನೊಂದು ಸಂದೇಹವಿದೆ. ಸ್ವಲ್ಪ ತಡೆಯಿರಿ. ಹಲವರ ಮುಖಗಳಲ್ಲಿ ಮೂಗಿನ ಪ್ರಾಮುಖ್ಯ ಜಾಸ್ತಿ. ಕಣ್ಣಿನ ನಂತರ ಮೂಗು ಮುಖಕ್ಕೆ ಲಕ್ಷಣ ಕೊಡುವುದು ಅಲ್ಲವೇ? ಆದರೆ ಮೂಗಿನ ತುದಿ ಮಾತ್ರ ಎಲ್ಲರಿಗೂ ಒಂದೇ ರೀತಿ ಇರುವುದಿಲ್ಲ ಎನ್ನುವುದು ಗೊತ್ತಿರುವ ವಿಷಯವೇ! ಕೆಲವರ ಮೂಗಿನ ತುದಿ ಚೂಪಾಗಿದ್ದು, ಕೆಲವರಲ್ಲಿ ತುದಿ ದಪ್ಪಗಿದ್ದರೆ, ಇನ್ನೂ ಕೆಲವರಲ್ಲಿ ಮೂಗಿನ ಹೊಳ್ಳೆಗಳೇ ಪಾಧಾನ್ಯವಾಗಿ ಮೂಗಿನ ತುದಿಯು ಮೇಲ್ಮಖವಾಗಿ ಆಕಾಶ ನೋಡುತ್ತಿದ್ದರೆ, ಸ್ವಲ್ಪ ಜನರಲ್ಲಿ ಮೂಗಿನ ತುದಿ ಮೇಲ್ತುಟಿಯನ್ನು ನೋಡುತ್ತಿದ್ದರೆ, ಇತರರಿಗೆ ಮೂಗು ತುದಿ ಗಿಳಿಮೂಗು ಆಗಿರುತ್ತದೆ.

              ಮೂಗಿನ ತುದಿಯಲ್ಲೇ ಕೋಪ ಎಂದು ಹೇಳುವವರನ್ನು ನಾನು ಕೇಳಬೇಕಾಗಿದೆ " ಯಾವ ರೀತಿಯ ಮೂಗಿನ ತುದಿ ಇದ್ದರೆ ನೀವು ಅನುಭವಿಸಿದ ಹಾಗೆ ಅಥವಾ ಕಂಡ ಹಾಗೆ ಕೋಪ ತುದಿಯಲ್ಲಿದ್ದು ಬೇಗ ಸಿಟ್ಟಾಗುತ್ತಾರೆ. ತಬ್ಬಿಬ್ಬಾಗಬೇಡಿ. ಇಂದಿನಿಂದ ಗಂಭೀರವಾಗಿ ಮುಂಗೋಪಿ ಎಂದು ಕರೆಯುವ ಆಪ್ತೇಷ್ಟರು ಅಥವಾ ನಿಮ್ಮ ದ್ವೇಷಿಗಳನ್ನು ಗಮನಿಸಿ. ಕೋಪ ಯಾವ ಮೂಗಿನ ತುದಿಯಿದ್ದರೆ ಕೋಪ ಬೇಗ ಬರತ್ತದೆ ಎಂದು ! ತಿಳಿಯಲ್ಲಿಲ್ಲವೇ.  

              ಈಗ ಆ ವ್ಯಕ್ತಿಯನ್ನು ಛೇಡಿಸಿ, ರೇಗಿಸಿ, ಪೀಡಿಸಿ ತಕ್ಷಣ ಗೊತ್ತಾಗುತ್ತದೆ ..ಕೋಪ ಬಂದಿದೆಯೇ ....

ನಾಯಿದು ಗೊತ್ತು ಆದರೆ ತನ್ನದು ಗೊತ್ತಿಲ್ಲ...

                ಬೆಳಿಗ್ಗೆ ಅಥವಾ ರಾತ್ರಿಯ ವೇಳೆ ನಾಯಿಗಳ ಯಜಮಾನರು ತಮ್ಮ ಸಾಕು ನಾಯಿಗಳನ್ನು ಅವುಗಳ ಬಹಿರ್ದೆಶೆಗೆ ( ಉಚ್ಚೆ, ಕಕ್ಕಸ್ಸು ಮಾಡಿಸಲು) ಕರೆದುಕೊಂಡು ಹೋಗುವುದನ್ನು ಸಿಟಿಯಲ್ಲಿ ವಾಸಿಸುವವರಿಗೆ ಗೊತ್ತೇಯಿದೆ! . ನಾಯಿ ಕಕ್ಕಸ್ಸು ಮಾಡುವ ಜಾಗ ಹುಡುಕುತ್ತಾ ಓಡಿದರೆ , ಅದನ್ನು ಹಿಡಿದಿರುವ ಯಜಮಾನ/ ಯಜಮಾನಿಗೆ ಅದು ನಡುಗೆಯಂತೆ. ನಾಯಿ ಕಕ್ಕಸ್ಸು ಮಾಡುವುದನ್ನು ನೋಡುತ್ತಾ ಕಾಯುವ ಮಂದಿಗೆ , ಅದೇ ಸ್ವಲ್ಪ ದೂರದಲ್ಲಿ ಯಾರಾದರೂ ಗಿಡದ ಅಥವಾ ಮರೆಯಲ್ಲಿ ಮೂತ್ರ ವಿಸರ್ಜಿಸುತ್ತಿದ್ದರೆ ಇದು ಅಸಹ್ಯವಂತೆ.
               
           ಸ್ವಚ್ಛತೆ ಬಗ್ಗೆ , ಕಸದ ಬಗ್ಗೆ , ಮೂತ್ರ ವಿಸರ್ಜನೆಯ ಬಗ್ಗೆ ಮಾತನಾಡುವ ನಾಗರಿಕರಾದ ನಮ್ಮಲ್ಲಿ ಹಲವರು ತಮ್ಮ ನಾಯಿಗಳನ್ನು ಗುರುತು ಪರಿಚಯವಿಲ್ಲದವರ ಮನೆಯ ಮುಂದೆ ಎಲ್ಲೆಂದರಲ್ಲಿ ಮೂತ್ರ ಮತ್ತು ಮಲ ವಿಸರ್ಜನೆ ಮಾಡಿಸುವುದಕ್ಕೆ ಅಭ್ಯಂತರವಿಲ್ಲ! ಎಂಥಾ ವಿಪರ್ಯಾಸ ಅಲ್ಲವೇ?

            ನಮ್ಮ ಸ್ನೇಹಿತರೊಬ್ಬರಿಗೆ ಮೂಲಸ್ಥಾನದಲ್ಲಿ ( ಗುದದ್ವಾರ) ನೋವಾಗುತ್ತಿದೆ , ಉಧಾಸೀನ ಮಾಡಬಾರದೆಂದು ವೈದ್ಯರನ್ನು ಸಂದರ್ಶಿಸಿದರೆ " ಮಲ ಹೋಗುವಾಗ ರಕ್ತವೇನಾದರೂ ಕಂಡಿತೆ?" ಎಂದು ಕೇಳಿದರಂತೆ. " ನಾನು ನೋಡಿಲ್ಲ ನಾಳೆ ಸರಿಯಾಗೆ ನೋಡಿ ಹೇಳುತ್ತೇನೆ" ಎಂದು ಹೇಳಿಬಂದರಂತೆ. ಅವರು ಈ ವಿಷಯ ಹೇಳಿದಾಗ ನನಗೆ ನಗುವೇ ಬಂದಿತು. ಅವನು ನಾಯನ್ನು ಕರೆದುಕೊಂಡು ಅದು ಕಕ್ಕಸ್ಸು ಮಾಡುವುದನ್ನು ಸಾವಧಾನವಾಗಿ ಗಮನಿಸುವ ಇವನು , ಅವನೇ ಹೋಗುವ ಮಲದ ಜೊತೆಗೆ ರಕ್ತ ಬಂದಿತ್ತೇ ಎಂಬುದು ಗಮನಿಸಿಲ್ಲ. ಅದಕ್ಕೇ ಒಂದು ದಿನ ಬೇಕು ಎಂದು ವಾಪಸ್ಸು ಬಂದನಲ್ಲ , ಏನು ಹೇಳಬೇಕು? ಪಾಯಿಖಾನೆಗೆ ಹೋದ ನಂತರ ತಕ್ಷಣ ನೀರಿನ ಸಂಗ್ರಹಣೆಯ ತೊಟ್ಟಿಯನ್ನು ಒತ್ತಿ ಪ್ಲಷ್ ಮಾಡುವುದರಿಂದ , ಅವನಿಗೆ ಯಾವಾಗಲಿಂದ ಈ ಸಮಸ್ಯೆಯಿತ್ತು ಎನ್ನುವುದೇ ತಿಳಿಯಲಿಲ್ಲ?

                ನಿಮ್ಮಲ್ಲೂ ಇಂಥ ಜನರಿದ್ದಾರೆ ಅಲ್ಲವೇ?